ಕಾರವಾರದ ಕೊಂಕಣ ರೈಲ್ವೇ ಮಾರ್ಗದ ವಿದ್ಯುದೀಕರಣ; ಇಂಧನ ಉಳಿಸುವಲ್ಲಿ ಸಹಕಾರಿ

|

Updated on: Apr 04, 2021 | 4:25 PM

ದಕ್ಷಿಣ ಕನ್ನಡ ಜಿಲ್ಲೆಯಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರದವರೆಗೆ ರೈಲ್ವೇ ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಕಡಿಮೆ ವೆಚ್ಚದಲ್ಲಿ ಅತೀ ವೇಗದ ಸೇವೆಯೊಂದಿಗೆ ಹೆಚ್ಚಿನ ರೈಲು ಸಂಚಾರಕ್ಕೆ ಸಹಕಾರಿಯಾಗಲಿದೆ. ಅಲ್ಲದೇ, ಕಾರವಾರದಿಂದ ಗೋವಾ ಭಾಗದ ವಿದ್ಯುದೀಕರಣ ಕಾಮಗಾರಿ ಕೂಡ ಪೂರ್ಣವಾದಲ್ಲಿ ಪ್ರತೀ ದಿನ ಉದ್ಯೋಗಕ್ಕಾಗಿ ತೆರಳುವ ಸಾವಿರಾರು ಜನರಿಗೆ ಇದು ಉಪಯೋಗವಾಗಲಿದೆ.

ಕಾರವಾರದ ಕೊಂಕಣ ರೈಲ್ವೇ ಮಾರ್ಗದ ವಿದ್ಯುದೀಕರಣ; ಇಂಧನ ಉಳಿಸುವಲ್ಲಿ ಸಹಕಾರಿ
ಕಾರವಾರ ರೈಲು ನಿಲ್ದಾಣ
Follow us on

ಉತ್ತರ ಕನ್ನಡ: ದೇಶದ ವಿವಿಧ ಮೂಲೆಗಳನ್ನು ಸಂಪರ್ಕಿಸುತ್ತಿರುವ ರೈಲ್ವೇ ವ್ಯವಸ್ಥೆ ಇದೀಗ ಗಮನಾರ್ಹ ಬದಲಾವಣೆಗಳನ್ನು ಕಾಣುತ್ತಿದೆ. ವಿವಿಧ ರೈಲ್ವೇ ಸೇವೆಗಳಂತೆ ಕೊಂಕಣ ರೈಲ್ವೇ ಕೂಡ ಇಷ್ಟು ದಿನಗಳ‌ ಕಾಲ ಡೀಸೆಲ್ ಹಾಗೂ ಕಲ್ಲಿದ್ದಲನ್ನು ಬಳಸುತ್ತಿತ್ತು. ಆದರೆ, ಪ್ರಸ್ತುತ ಎಲೆಕ್ಟ್ರಿಕಲ್ ವ್ಯವಸ್ಥೆಗೆ ರೂಪಾಂತರಗೊಳ್ಳುತ್ತಿದ್ದು, ಮಾಲಿನ್ಯ ಕಡಿಮೆಗೊಳಿಸಿ ಹೆಚ್ಚಿನ ಲಾಭದೊಂದಿಗೆ ಉತ್ತಮ‌ ಸೌಲಭ್ಯ ನೀಡಲು ಅಣಿಯಾಗುತ್ತಿದೆ. ರಾಜ್ಯದಲ್ಲಿ ಕೊಂಕಣ ರೈಲ್ವೇ ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡಿದ್ದು, ಕೆಲವೇ ದಿನದಲ್ಲಿ ಸಾರ್ವಜನಿಕರ ಪ್ರಯಾಣಕ್ಕೆ ಈ ಸೌಲಭ್ಯ ಒದಗಲಿದೆ.

ಕೋಟಿಗಟ್ಟಲೆ ಮೌಲ್ಯದ ಇಂಧನ ಉಳಿಸುವ ಜತೆಗೆ ಕರಾವಳಿಯ ಜನರಿಗೆ ಸಾಕಷ್ಟು ಅನುಕೂಲಗಳನ್ನು ಒದಗಿಸಲು ಕೊಂಕಣ ರೈಲ್ವೇ ವಿದ್ಯುದೀಕರಣಗೊಳ್ಳುವತ್ತ ಮಹತ್ತರ ಹೆಜ್ಜೆಯಿರಿಸುತ್ತಿದೆ.‌ ಕಳೆದ ಮೂರು ವರ್ಷದಿಂದ 1,100 ಕೋಟಿ ರೂಪಾಯಿ ವೆಚ್ಚದಲ್ಲಿ ಕೊಂಕಣ ರೈಲ್ವೇ ಮಾರ್ಗದ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದ್ದು, ಇದೀಗ ಪೂರ್ಣಗೊಳ್ಳುವ ಹಂತದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ತೋಕೂರಿನಿಂದ ಉಡುಪಿ ಜಿಲ್ಲೆಯ ಬಿಜೂರುವರೆಗೆ ಕೊಂಕಣ ರೈಲ್ವೇಯ ಸುಮಾರು 106 ಕಿಲೋ ಮೀಟರ್ ಮಾರ್ಗದ ವಿದ್ಯುದೀಕರಣ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ.

ಪ್ರಸ್ತುತ, ಕಾರವಾರದವರೆಗಿನ 105 ಕಿಲೋಮೀಟರ್ ಕಾಮಗಾರಿ ಕೂಡ ಪೂರ್ಣಗೊಂಡಿದ್ದು, ಇದರ ಪರೀಕ್ಷಾರ್ಥ ಸಂಚಾರ ಸಹ ಯಶಸ್ವಿಯಾಗಿದೆ. ಇನ್ನು ಕಾರವಾರದಿಂದ ಗೋವಾವರೆಗಿನ ಮಾರ್ಗ ಪೂರ್ಣಗೊಳ್ಳಬೇಕಿದ್ದು, ಜೂನ್ ಅಂತ್ಯದಲ್ಲಿ ಇದು ಪೂರ್ಣಗೊಳ್ಳಲಿದೆ. ಇದರಿಂದಾಗಿ ಇಷ್ಟು ದಿನಗಳ ಕಾಲ ದುಬಾರಿ ಬೆಲೆಯ ಡೀಸೆಲ್ ಬಳಕೆಯೊಂದಿಗೆ ಚಲಿಸುತ್ತಿದ್ದ ರೈಲುಗಳು ಇನ್ನು ಮುಂದಕ್ಕೆ ಎಲೆಕ್ಟ್ರಿಕ್ ವ್ಯವಸ್ಥೆಯೊಂದಿಗೆ ಸಾಗುವ ಮೂಲಕ ಇಲಾಖೆಯ ಹೊರೆ ಕಡಿತಗೊಳ್ಳಲಿದೆ. ಈ ಮೂಲಕ ರೈಲ್ವೇ ಇಲಾಖೆಗೆ ಪ್ರತೀ ವರ್ಷ 100 ಕೋಟಿ ರೂಪಾಯಿ ಉಳಿತಾಯವಾಗಲಿದೆ.

ಕೊಂಕಣ ರೈಲ್ವೇ ಮಾರ್ಗದ ವಿದ್ಯುದೀಕರಣ

ದಕ್ಷಿಣ ಕನ್ನಡ ಜಿಲ್ಲೆಯಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರದವರೆಗೆ ರೈಲ್ವೇ ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಕಡಿಮೆ ವೆಚ್ಚದಲ್ಲಿ ಅತೀ ವೇಗದ ಸೇವೆಯೊಂದಿಗೆ ಹೆಚ್ಚಿನ ರೈಲು ಸಂಚಾರಕ್ಕೆ ಸಹಕಾರಿಯಾಗಲಿದೆ. ಅಲ್ಲದೇ, ಕಾರವಾರದಿಂದ ಗೋವಾ ಭಾಗದ ವಿದ್ಯುದೀಕರಣ ಕಾಮಗಾರಿ ಕೂಡ ಪೂರ್ಣವಾದಲ್ಲಿ ಪ್ರತೀ ದಿನ ಉದ್ಯೋಗಕ್ಕಾಗಿ ತೆರಳುವ ಸಾವಿರಾರು ಜನರಿಗೆ ಇದು ಉಪಯೋಗವಾಗಲಿದೆ. ಜೂನ್​ನಲ್ಲಿ ಈ ಯೋಜನೆ ಪೂರ್ಣಗೊಳ್ಳಲ್ಲಿದೆ. ಡೀಸೆಲ್​ನ ಮೇಲಿನ ಖರ್ಚು ಇದರಿಂದ ಕಡಿಮೆಯಾಗಲಿದೆ ಎಂದು ಕಾರವಾರ ವಿಭಾಗದ ಕ್ಷೇತ್ರೀಯ ರೈಲ್ವೇ ಪ್ರಬಂಧಕರಾದ ಬಾಳಾಸಾಹೇಬ್ ಬಿ.ನಿಕಮ್ ಹೇಳಿದ್ದಾರೆ.

ಇನ್ನು ಮಂಗಳೂರಿನಿಂದ ಮುಂಬೈವರೆಗೆ ಬುಲೆಟ್ ಟ್ರೈನ್ ಕೂಡ ಓಡಿಸಬಹುದಾಗಿದ್ದು, ಕರಾವಳಿ ಜಿಲ್ಲೆಯ ಜನರಿಗೆ ಕೊಂಕಣ ರೈಲ್ವೇ ವಿದ್ಯುದೀಕರಣದಿಂದ ಹೆಚ್ಚು ಲಾಭವಾಗಲಿದೆ. ಅಂದಹಾಗೆ, ಕೊಂಕಣ ರೈಲ್ವೆ ಮಾರ್ಗವು ಒಟ್ಟು 756 ಕಿ.ಮೀ. ಉದ್ದವಿದ್ದು, ಮಹಾರಾಷ್ಟ್ರದ ರೋಹಾದಿಂದ ಮಂಗಳೂರಿನ ತೋಕೂರಿನವರೆಗೆ ಚಾಚಿಕೊಂಡಿದೆ. ಈಗಿನ ವಿದ್ಯುದೀಕರಣದಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ಡೀಸೆಲ್ ಚಾಲಿತ ಲೋಕೋಗಳ ಸದ್ದು ಮರೆಯಾಗಲಿದ್ದು, ಈ ವರ್ಷ ಡಿಸೆಂಬರ್​ನಿಂದ ಜೂನ್ ಅಂತ್ಯದ ಒಳಗೆ ವಿದ್ಯುತ್ ಚಾಲಿತ ರೈಲ್ವೇ ಸೇವೆ ಬಹುತೇಕ ಜನರಿಗೆ ದೊರೆಯಲಿದೆ.

ಒಟ್ಟಿನಲ್ಲಿ ಡೀಸೆಲ್ ಹಾಗೂ ಕಲ್ಲಿದ್ದಲಿನ ಬಳಕೆಯ ಬದಲು ವಿದ್ಯುತ್ ಚಾಲಿತ ವ್ಯವಸ್ಥೆಗಳತ್ತ ಕೊಂಕಣ‌ ರೈಲ್ವೇ ರೂಪಾಂತರಗೊಳ್ಳುತ್ತಿದ್ದು, ಈ ಮೂಲಕ ಕರಾವಳಿಗರ ಉದ್ಯೋಗ, ಶಿಕ್ಷಣ ಹಾಗೂ ದೂರದ ಪ್ರಯಾಣಕ್ಕೂ ಸಹಕಾರಿಯಾಗಲಿದೆ.

(ವರದಿ: ಮಂಜುನಾಥ ಪಟಗಾರ)

ಇದನ್ನೂ ಓದಿ: ರೈಲ್ವೆ ಕಂಬಿಗಳ ಬೇಲಿ ನಿರ್ಮಾಣ; ಆನೆಗಳ ಉಪಟಳವನ್ನು ನಿಲ್ಲಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ನೂತನ ಪ್ರಯೋಗ

(Electrification of Karawara Konkan Railway Line to be completed by june)

Published On - 4:24 pm, Sun, 4 April 21